ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ
ಸ್ವಪ್ನಸ್ಥಾನಸ್ತೈಜಸ ಉಕಾರೋ ದ್ವಿತೀಯಾ
ಮಾತ್ರೋಕ್ತರ್ಷಾದ್ಬಯತ್ವಾದ್ವೋಕ್ತರ್ಷತಿ ಹ ವೈ
ಜ್ನಾನಸಂತತಿಂ ಸಮಾನಶ್ಚ ಭವತಿ
ನಾಸ್ಯಾಬ್ರಹ್ಮವಿತ್ಕುಲೇ ಭವತಿ ಯ ಏವಂ ವೇದ ೧೦
ಸ್ವಪ್ನಾವಸ್ಥೆಯು ಕ್ಷೇತ್ರ ವಾಗಿರುವ ತೈಜಸವೇ ಎರಡನೇ ಶಬ್ಧ ’ಉ” ಏಕೆಂದರೆ ಇದು ಶ್ರೇಷ್ಟವಾದ್ದು ಮತ್ತು ಮಿಕ್ಕ ಎರಡು ಶಬ್ಧಗಳ ಗುಣವನ್ನೂ ಹೊಂದಿರುವಂತಾದ್ದು.ಮಿಕ್ಕ ಎರಡು ಶಬ್ಧಗಳು ಎಂದರೆ ಅ ಮತ್ತು ಮ. ಇದನ್ನು ಅರಿತವನಲ್ಲಿ ಜ್ನಾನವು ಅತ್ಯುನ್ನತ ವಾಗಿ ಪ್ರವಹಿಸುತ್ತದೆ ಮತ್ತು ಇಂತಹವನ ವಂಶದಲ್ಲಿ ಹುಟ್ಟುವವರಲ್ಲಿ ಯಾರೂ ಅಜ್ನಾನಿಗಳು ಆಗಿರುವುದಿಲ್ಲ. ಎಲ್ಲರೂ ಬ್ರಹ್ಮನ್ ನ ಅರಿವು ಉಳ್ಳವರಾಗಿರುತ್ತಾರೆ. ತೈಜಸ ಎಂದರೆ ಏನು ಎಂಬ ಬಗ್ಗೆಯೂ ಈ ಹಿಂದೆ ತಿಳಿದುಕೊಂಡಿದ್ದೇವೆ.
ಸುಷುಪ್ತಸ್ಥಾನಃ ಪ್ರಜ್ನೋ ಮಕಾರಸ್ತೃತೀಯಾ ಮಾತ್ರಾ
ಮಿತೇರಪಿತೇರ್ವಾ ಮಿನೋತಿ ಹ ವಾ ಇದಂ
ಸರ್ವಮಪಿತಿಶ್ಚ ಭವತಿ ಯ ಏವಂ ವೇದ ೧೧
ಆಳವಾದ ನಿದ್ರೆ ಅಂದರೆ ಸುಷುಪ್ತಾವಸ್ಥೆಯು ಕ್ಷೇತ್ರವಾಗಿರುವ ಪ್ರಜ್ನೆಯೇ ಮೂರನೆಯ ಶಬ್ಧ ’ಮ” ಏಕೆಂದರೆ ಇದು ಮಾಪನ ಮತ್ತು ಇದರೊಳಗೆ ಎಲ್ಲವೂ ಪ್ರವೇಶಿಸುತ್ತವೆ. ಇದನ್ನು ಯಾರು ಅರಿಯುತ್ತಾನೋ ಅವನು ಎಲ್ಲವನ್ನೂ ಅಳೆಯಬಲ್ಲವನಾಗುತ್ತಾನೆ ಮತ್ತು ಎಲ್ಲವೂ ಅವನೇ ಆಗಿಬಿಡುತ್ತಾನೆ.
ಅಮಾತ್ರಶ್ಚತುರ್ಥೋsವ್ಯವಹಾರ್ಯಃ ಪ್ರಪಂಚೋಪಶಮಃ ಶಿವೋsದ್ವೈತ
ಏವಮೋಂಕಾರ ಆತ್ಮೈವ ಸಂವಿಶತ್ಯಾತ್ಮನಾತ್ಮಾನ್ ಯ ಏವಂ ವೇದ ಯ ಏವಂ ವೇದ ೧೨
ಆತ್ಮನೇ ನಾಲ್ಕನೆಯ ಹಂತ. ಅದು ಶಬ್ಧವೇ ಇಲ್ಲದ್ದು. ಮಾತಿನಲ್ಲಿ ಹೇಳಲಾಗದ್ದು, ಅವರ್ಣನೀಯವಾದ್ದು. ಆನಂದವಾದ್ದು, ಅದ್ವೈತವಾದ್ದು. ಹಾಗಾಗಿ ಸತ್ಯವಾಗಿಯೂ ಓಂ ಎನ್ನುವ ಶಬ್ಧವೇ ಆತ್ಮ. ಇದನ್ನು ಯಾರು ಅರಿಯುತ್ತಾನೋ ಅಂತಹವನು ಆತ್ಮನಲ್ಲಿಯೇ ಬೆರೆತು ಒಂದಾಗುತ್ತಾನೆ. ಇದನ್ನು ಅರಿತವನು ಆತ್ಮನಲ್ಲಿಯೇ ಬೆರೆತು ಒಂದಾಗಿಬಿಡುತ್ತಾನೆ.
ಮನೀಷಾ ಪಂಚಕದ ನಾಲ್ಕನೆಯ ಶ್ಲೋಕವು ಅಯಂ ಆತ್ಮಾ ಬ್ರಹ್ಮ ಎಂಬ ನಾಲ್ಕನೇ ಮಹಾವಾಕ್ಯವನ್ನು ಪ್ರತಿಪಾದಿಸಿರುವ ಬಗ್ಗೆ ತಿಳಿದುಕೊಂಡ ನಂತರ, ಆತ್ಮಾ ಎಂಬುದರ ಸ್ವರೂಪವನ್ನು ತಿಳಿಯುವ ಸಲುವಾಗಿ ನಾವು ಮಾಂಡೂಕ್ಯ ಉಪನಿಷತ್ತಿನ ಮೊರೆಹೋಗ ಬೇಕಾಯಿತು. ಆತ್ಮಾ ಎನ್ನುವುದರ ಮೂಲವು ಪ್ರಜ್ನೆ ಎಂದು ತಿಳಿದುಕೊಂಡು ಹೇಗೆ ಈ ಪ್ರಜ್ನೆಯು ಓಂ ಕಾರ ಶಬ್ಧದೊಂದಿಗೆ ಸಮೀಕರಣ ಗೊಂಡಿವೆ ಎಂಬುದನ್ನೂ ತಿಳಿದುಕೊಂಡಾಗ ಪ್ರಣವ ಎಂದು ಕರೆಯಲಾಗುವ ಓಂಕಾರ ಶಬ್ಧವೇ ಆತ್ಮ ಎಂಬ ಅರಿವಾಯಿತು. ಆತ್ಮವೇ ಬ್ರಹ್ಮ, ಆ ಅತ್ಮವೇ ಓಂಕಾರ ಎಂದಾಗ ಓಂಕಾರವೇ ಬ್ರಹ್ಮ ಎಂಬಲ್ಲಿಗೆ ಮುಟ್ಟಿದ್ದೇವೆ. ಇನ್ನು ಈ ಆತ್ಮನ ಸಾಕ್ಷಾತ್ಕಾರವಾಗಲು ಗುರುವಿನ ಕರುಣೆ, ಅನುಗ್ರಹ ಬೇಕಷ್ಟೆ. ಆತ್ಮ ಎಂಬುದರ ಬಗ್ಗೆ ಇಲ್ಲಿವರೆಗೆ ನೀಡಿರುವ ಎಲ್ಲ ವಿವರಣೆ, ಒಂದು ಒಳ್ಳೆಯ ಅಪರೂಪವಾದ ಸಿಹಿ ತಿನಿಸನ್ನು ತಯಾರು ಮಾಡುವ ವಿಧಾನವನ್ನು ತಿಳಿಸಿ ಬರೆದಿರುವ ಪುಸ್ತಕ ಆಗಿದೆ ಅಷ್ಟೆ. ಆ ಸಿಹಿಯನ್ನು ನಾವೇ ತಯಾರಿಸಬೇಕು, ನಂತರ ಅದರ ಸವಿಯನ್ನು ನಾವು ಸವಿಯಬೇಕು. ಅದು ಪ್ರಜ್ನಾನಂ ಬ್ರಹ್ಮ, ಅಹಂ ಬ್ರಹ್ಮಾಸ್ಮಿ, ತತ್ವಮ್ ಅಸಿ, ಅಯಮಾತ್ಮಾ ಬ್ರಹ್ಮ. ಈ ಸಿಹಿ ತಿನಿಸಿನ ತಯಾರಿಕೆಗೆ ಸಾಮಗ್ರಿಗಳನ್ನು ಹೊಂದಿಸುವ ಪ್ರಕ್ರಿಯೆ ಈ ದಿನದಿಂದಲೇ, ಈ ಕ್ಷಣದಿಂದಲೇ ಆರಂಭ ಆಗಲಿ. ಗುರುಮಂಡಲ ರೂಪಿಣಿ ಶ್ರೀ ಲಲಿತಾ ಮಹಾತ್ರಿಪುರಸುಂದರಿ ನಮ್ಮನ್ನು ಅನುಗ್ರಹಿಸಲಿ.
ಈಗ ಮನೀಷಾ ಪಂಚಕದ ಐದನೆಯ ಶ್ಲೋಕವನ್ನು ನೋಡೋಣ.
ಯತ್ಸೌಖ್ಯಾಮ್ಬುಧಿಲೇಶಲೇಶತ ಇಮೇ ಶಾಕ್ರದಯೋ ನಿರ್ವೃತಾ
ಯಾಚ್ಚಿತೇ ನಿತರಾಂ ಪ್ರಶಾನ್ತಕಲನೇ ಲಬ್ಧ್ವಾ ಮುನಿರ್ನಿವೃತಃ
ಯಸ್ಮಿನ್ನಿತ್ಯಸುಖಾಮ್ಬುಧೌ ಗಲಿತಧೀರ್ಬ್ರಹ್ಮೈವ ನ ಬ್ರಹ್ಮವಿದ್
èಯಃ ಕಶ್ಚಿತ್ಸ ಸುರೇನ್ದ್ರವನ್ದಿತಪದೋ ನೂನಂ ಮನೀಷಾ ಮಮ
ಇತಿ ಶ್ರೀಮದ್ ಶಂಕರಭಗವತಃ ಕೃತೌ ಮನೀಷಾ ಪಂಚಕಂ ಸಂಪೂರ್ಣಂ
ಇಂದ್ರನೂ ಸೇರಿದಂತೆ ಎಲ್ಲ ದೇವತೆಗಳನ್ನು ತೃಪ್ತಿ ಪಡೆಸಲು ಅತ್ಮಾನಂದ ವೆಂಬ ಸಾಗರದ ಸಣ್ಣ ಹನಿಗಳು ಸಾಕು ಆದರೆ ಯಾರ ಮನಸ್ಸು ತೃಪ್ತವಾಗಿದೆಯೋ, ಶಾಂತ ಸ್ಥಿತಿಯನ್ನು ತಲುಪಿದೆಯೋ ಅಂತಹ ಯೋಗಿಯು ತಣಿಯುವುದು ಸಂಪೂರ್ಣವಾಗಿ ಆತ್ಮಾನಂದದ ಸಾಗರವನ್ನೇ ಪಡೆದುಕೊಂಡಾಗ ಮಾತ್ರ. ಅಂತಹ ಯೋಗಿಯು ಬ್ರಹ್ಮ ವನ್ನು ಅರಿತವನಷ್ಟೇ ಅಲ್ಲಾ, ತಾನೇ ಬ್ರಹ್ಮ ಆಗಿಬಿಡುತ್ತಾನೆ. ಇಂತಹವರು ಅಪರೂಪ. ಇಂತಹವರ ಪಾದಪೂಜೆಯನ್ನು ದೇವತೆಗಳ ರಾಜ ಇಂದ್ರನೇ ಮಾಡುತ್ತಾನೆ. ಇದು ನನ್ನ ನಿರ್ಣಾಯಕ ನಂಬಿಕೆ. ಮನೀಷಾ ಮಮ. ಇಲ್ಲಿಗೆ ಶ್ರೀ ಮದ್ ಶಂಕರ ಭಗವತ್ಪಾದರಿಂದ ರಚಿತವಾದ ಮನೀಷಾ ಪಂಚಕಂ ಸಂಪೂರ್ಣ ವಾಯಿತು.
ನಾವು ಇಷ್ಟು ಹೊತ್ತು ಕೇಳಿದ್ದು ಶ್ರೀ ಶಂಕರ ಭಗವತ್ಪಾದರ ನಿರ್ಣಾಯಕ ನಂಬಿಕೆ,ಮನೀಷಾ ಮಮ. ಶ್ರೀ ಶಂಕರ ಭಗವತ್ಪಾದರನ್ನು ಶಂಕರರ ಪ್ರತಿರೂಪವೇ ಎಂದು ಭಾವಿಸಿ, ನಮ್ಮ ಹೃದಯ ಸಿಂಹಾಸನದಲ್ಲಿ ಕೂಡಿಸಿ ಆರಾಧಿಸುತ್ತಿರುವ ನಮ್ಮಂತಹವರಿಗೆ ಈ ನಿರ್ಣಾಯಕ ನಂಬಿಕೆ ಬರುವುದು ಯಾವಾಗ? ಭಗವತ್ಪಾದರ ನಿರ್ಣಾಯಕ ನಂಬಿಕೆಯು ನಮ್ಮ ನಿರ್ಣಾಯಕ ನಂಬಿಕೆ ಆಗದೇ ನಮ್ಮ ಪೂಜೆ ನಮ್ಮ ಆರಾಧನೆ ಭಗವತ್ಪಾದರನ್ನು ತಲುಪುವುದಾದರೂ ಹೇಗೆ? ಎಂಬ ಪ್ರಶ್ನೆಗಳನ್ನು ಹಾಕಿಕೊಳ್ಳುತ್ತಾ, ಅವರ ನಿರ್ಣಾಯಕ ನಂಬಿಕೆಯೇ ನಮ್ಮ ನಿರ್ಣಾಯಕ ನಂಬಿಕೆಯೂ ಆಗುವ ಹಾಗೆ ಶ್ರೀ ಶಂಕರ ಭಗವತ್ಪಾದರು ನಮ್ಮನ್ನು ಅನುಗ್ರಹಿಸಲಿ ಎಂದು ಅವರನ್ನು ಶ್ರದ್ಧಾ ಭಕ್ತಿಗಳಿಂದ ಪ್ರಾರ್ಥಿಸುತ್ತಾ, ನನ್ನ ಗುರುಗಳು, ಗುರುಪರಂಪರೆ ಮತ್ತು ಗುರುಮಂಡಲ ರೂಪಿಣಿ ಶ್ರೀ ಲಲಿತಾ ಮಹಾತ್ರಿಪುರ ಸುಂದರಿಯು ಈ ಅಲ್ಪಜ್ನ ನಾದ ನನ್ನಿಂದ ಹೇಳಿಸಿರುವ ಈ ಮನೀಷಾ ಪಂಚಕದ ವಿವರಣೆ ಯನ್ನು ಅವರ ಪಾದಪದ್ಮಗಳಲ್ಲಿಯೇ ಸಂಪೂರ್ಣ ಶರಣಾಗತಿಯೊಂದಿಗೆ ಅರ್ಪಿಸುತ್ತಿದ್ದೇನೆ.
ಓಂ ಪೂರ್ಣಮದಃ ಪೂರ್ಣಮಿದಂ
ಪೂರ್ಣಾತ್ ಪೂರ್ಣಮದುಚ್ಯತೇ
ಪೂರ್ಣಸ್ಯ ಪೂರ್ಣಮಾದಾಯ
ಪೂರ್ಣಾಮೇವಾವಶಿಷ್ಯತೇ
ಓಂ ಅದು ಪೂರ್ಣ, ಇದು ಪೂರ್ಣ, ಪೂರ್ಣದಿಂದಲೇ ಪೂರ್ಣದ ಉದಯ
ಪೂರ್ಣದಿಂದ ಪೂರ್ಣವನ್ನು ತೆಗೆದರೆ ಉಳಿಯುವುದೂ ಪೂರ್ಣ
ಶ್ರೀ ಶಂಕರ ಭಗವತ್ಪಾದರ ಮನೀಷಾ ಪಂಚಕ – ಭಾಗ 1
ಶ್ರೀ ಶಂಕರ ಭಗವತ್ಪಾದರ ಮನೀಷಾ ಪಂಚಕ – ಭಾಗ 2
ಶ್ರೀ ಶಂಕರ ಭಗವತ್ಪಾದರ ಮನೀಷಾ ಪಂಚಕ – ಭಾಗ 3
ಓಂ ಶಾಂತಿಃ ಶಾಂತಿಃ ಶಾಂತಿಃ
3 Responses
[…] ಶ್ರೀ ಶಂಕರ ಭಗವತ್ಪಾದರ ಮನೀಷಾ ಪಂಚಕ – ಕೊನ… […]
[…] ಶ್ರೀ ಶಂಕರ ಭಗವತ್ಪಾದರ ಮನೀಷಾ ಪಂಚಕ – ಕೊನ… […]
[…] ಶ್ರೀ ಶಂಕರ ಭಗವತ್ಪಾದರ ಮನೀಷಾ ಪಂಚಕ – ಕೊನ… […]