ಶ್ರೀ ಗುರುಭ್ಯೋ ನಮಃ
ಜಾತಕ ಫಲನಿರೂಪಣೆ ಮಾಡುವಾಗ ಕೇವಲ ರಾಶಿ ಕುಂಡಲಿಯನ್ನು ಮಾತ್ರ ಗಣನೆಗೆ ತೆಗೆದುಕೊಳ್ಳದೆ, ಷೋಡಶವರ್ಗಗಳನ್ನೂ ಪರಿಗಣಿಸಬೇಕು ಎಂಬುದು ಶಾಸ್ತ್ರ ವಾಕ್ಯ ಕಡೆಯ ಪಕ್ಷ ನವಾಂಶವನ್ನಾದರೂ ಪರಿಗಣಿಸಲೇಬೇಕು. ಇಂದಿನ ಅತಿವೇಗದ ಜಗತ್ತಿನಲ್ಲಿ ಅದು ಸಾಧ್ಯವೇ ಇಲ್ಲವೇನೋ ಎಂಬಂತಹ ಸ್ಥಿತಿಗೆ ನಾವು ಬಂದು ನಿಂತಿದ್ದೇವೆ ಎಂಬುದು ಅತ್ಯಂತ ಕಹಿಯಾದ ಸತ್ಯವಾಗಿದೆ.
ಇಂತಹ ಸ್ಥಿತಿಯಲ್ಲಿ ಷೋಡಶವರ್ಗಗಳು, ಫಲ ನಿರೂಪಣೆಯಲ್ಲಿ ಅವುಗಳ ಪಾತ್ರದ ಬಗ್ಗೆ ಬೆಳಕು ಚೆಲ್ಲುವ ಚಿಕ್ಕ ಪ್ರಯತ್ನವಾಗಿ ತ್ರಿಂಶಾಂಶ ಮತ್ತು ಷಷ್ಟ್ಯಾಂಶಗಳ ಬಗ್ಗೆ ವಿವರಗಳನ್ನು ಹಂಚಿಕೊಳ್ಳುತ್ತಿದ್ದೇನೆ.
ರಾಶಿಕುಂಡಲಿ / ಲಗ್ನಕುಂಡಲಿಯು ಜಾತಕನನ್ನು ನಿರೂಪಿಸಿದರೆ, ತ್ರಿಂಶಾಂಶ ಅದರ ಬಲಹೀನತೆಯನ್ನು ತೋರುತ್ತದೆ. ಮಾನವನ ಬಲಹೀನತೆ ಎಂದರೆ ಅರಿಷಡ್ವರ್ಗಗಳು.
ಶುಕ್ರನು ಕಾಮವನ್ನು, ಮಂಗಳನು ಕ್ರೋಧವನ್ನೂ, ರಾಹುವು ಲೋಭವನ್ನೂ, ಕೇತುವು ಮೋಹವನ್ನೂ, ಶನಿಯು ಮದವನ್ನೂ ಮತ್ತು ಬುಧನು ಮಾತ್ಸರ್ಯವನ್ನು ಸೂಚಿಸುತ್ತಾರೆ. ತ್ರಿಂಶಾಂಶದಲ್ಲಿ ಈ ಗ್ರಹಗಳ ಸ್ಥಾನವು, ಜಾತಕನ ಯಾವ ಅರಿಷಡ್ವರ್ಗ ಅವನಿಗೆ ಹೆಚ್ಚು ಬಲಹೀನತೆಯನ್ನು ನೀಡಿದೆ ಎಂಬುದು ತಿಳಿದರೆ, ಅದನ್ನು ನಿಯಂತ್ರಿಸಲು ಪ್ರಯತ್ನಿಸಬಹುದು.
ನಮಗೆಲ್ಲ ತಿಳಿದಿರುವ ಹಾಗೆ ಅಗ್ನಿಯನ್ನು ಮಂಗಳನೂ, ಪೃಥ್ವಿಯನ್ನು ಬುಧನೂ, ಜಲವನ್ನು ಶುಕ್ರನೂ, ವಾಯುವನ್ನು ಶನಿಯೂ ಮತ್ತು ಆಕಾಶವನ್ನು ಗುರುವೂ ಸೂಚಿಸುತ್ತಾರೆ. ರಾಶಿಗಳೂ ಸಹಾ ಮೇಷದಿಂದ ಆರಂಭವಾಗಿ ಕರ್ಕಾಟಕ ದವರೆಗೆ ಕ್ರಮವಾಗಿ ಅಗ್ನಿ, ಪೃಥ್ವಿ, ವಾಯು ಮತ್ತು ಜಲರಾಶಿಗಳು. ಇದೇ ಕ್ರಮವೇ ಮೀನ ರಾಶಿಯವರೆಗೂ ಮುಂದುವರೆಯುತ್ತದೆ.
ತ್ರಿಂಶಾಂಶ ಕುಂಡಲಿಯನ್ನು ರಚಿಸಿದಾಗ, ರಾಶಿ ಕುಂಡಲಿಯಲ್ಲಿ ಬೆಸ ರಾಶಿಯಲ್ಲಿರುವ ಗ್ರಹಗಳು ಮೊದಲ ೫ ಡಿಗ್ರಿ/ ಭಾಗ ಮಂಗಳ (ಅಗ್ನಿ), ನಂತರ ೧೦ ಡಿಗ್ರಿ/ ಭಾಗದ ವರೆಗೆ ಶನಿ (ವಾಯು), ನಂತರ ೧೮ ರವರೆಗೆ ಗುರು(ಇಂದ್ರ), ನಂತರ ೨೫ ರವರೆಗೆ ಬುಧ( ಕುಬೇರ) ಮತ್ತು ಕೊನೆಯ ೫ ಡಿಗ್ರಿ/ಭಾಗ ಶುಕ್ರ( ವರುಣ) ಆದರೆ ಸರಿರಾಶಿಯಲ್ಲಿನ ಗ್ರಹಗಳ ಮೊದಲ ೫ ಭಾಗ ಶುಕ್ರ(ವರುಣ), ನಂತರ ೧೨ ನೇ ಭಾಗದವರೆಗೂ ಬುಧ (ಕುಬೇರ), ನಂತರ ೨೦ ನೇ ಭಾಗದವರೆಗೂ ಗುರು (ಇಂದ್ರ), ನಂತರ ೨೫ ರವರೆಗೆ ಶನಿ (ವಾಯು) ಮತ್ತು ಕೊನೆಯ ೫ ಭಾಗ ( ಮಂಗಳ) ಅಗ್ನಿ ಆಗುತ್ತದೆ.
ರಾಶಿ ಕುಂಡಲಿಯಲ್ಲಿ ಗ್ರಹಗಳು ಇರುವ ಭಾಗದಿಂದ ಅವುಗಳ ತತ್ವವನ್ನು ತಿಳಿದು ಆಯಾ ತತ್ವದ ರಾಶಿ ಗ್ರಹದ ತ್ರಿಂಶಾಂಶ ರಾಶಿ ಆಗುತ್ತದೆ. ಒಂದೊಂದು ಗ್ರಹವೂ ಎರಡೆರಡು ರಾಶಿ ಆಧಿಪತ್ಯ ಹೊಂದಿ ಒಂದು ಬೆಸ ಸಂಖ್ಯೆಯ ರಾಶಿ ಇನ್ನೊಂದು ಸರಿ ಸಂಖ್ಯೆಯ ರಾಶಿ. ರಾಶಿ ಕುಂಡಲಿಯ ಗ್ರಹ ಬೆಸ ಸಂಖ್ಯೆಯ ರಾಶಿಯಲ್ಲಿದ್ದರೆ ತ್ರಿಂಶಾಶದಲ್ಲಿ ತ್ರಿಂಶಾಂಶ ಗ್ರಹದ ಬೆಸ ಸಂಖ್ಯೆಯ ರಾಶಿ ತ್ರಿಂಶಾಂಶ ರಾಶಿಯಾಗುತ್ತದೆ.
ಉದಾ: ರಾಶಿ ಕುಂಡಲಿಯ ಬೆಸ ಸಂಖ್ಯೆಯ ರಾಶಿಯಲ್ಲಿ ೧ ನೇ ಭಾಗದಿಂದ ೫ ನೇ ಭಾಗದವರೆಗೂ ಇರುವ ಗ್ರಹದ ತ್ರಿಂಶಾಂಶ ಅಧಿಪತಿ ಮಂಗಳ. ಮಂಗಳನ ಬೆಸ ಸಂಖ್ಯೆಯ ರಾಶಿ ಮೇಷ. ಅದು ಆ ಗ್ರಹದ ತ್ರಿಂಶಾಂಶ ರಾಶಿಯಾಗುತ್ತದೆ. ಹಾಗೆಯೇ ರಾಶಿ ಕುಂಡಲಿಯ ಸರಿ ಸಂಖ್ಯೆಯ ರಾಶಿಯಲ್ಲಿ ೨೫ ನೇ ಭಾಗದಿಂದ ೩೦ ನೇ ಭಾಗದವರೆಗೂ ಇರುವ ಗ್ರಹದ ತ್ರಿಂಶಾಂಶ ಅಧಿಪತಿಯೂ ಮಂಗಳನೇ ಆಗಿದ್ದು, ಆ ಗ್ರಹವು ರಾಶಿಯಲ್ಲಿ ಸರಿ ಸಂಖ್ಯೆಯ ರಾಶಿಯಲ್ಲಿರುವುದರಿಂದ ಆ ಗ್ರಹದ ತ್ರಿಂಶಾಂಶ ರಾಶಿ ಮಂಗಳನ ಸರಿ ಸಂಖ್ಯೆಯ ರಾಶಿಯಾದ ವೃಶ್ಚಿಕ ಆಗುತ್ತದೆ.
ರಾಶಿ ಕುಂಡಲಿಯ ಗ್ರಹಗಳ ತತ್ವ, ಅವು ಸ್ಥಿತವಾಗಿರುವ ರಾಶಿಯ ತತ್ವದ ಜತೆಗೆ ತ್ರಿಂಶಾಂಶ ಕುಂಡಲಿಯಲ್ಲಿನ ತತ್ವ ಬಹಳ ಮುಖ್ಯವಾಗಿ ಗಮನಿಸಬೇಕಿದೆ. ರಾಶಿ ಕುಂಡಲಿಯಲ್ಲಿ ಬಲಿಷ್ಟವಾಗಿರುವ ಲಗ್ನವು ಅಗ್ನಿ ತತ್ವ ರಾಶಿಯಾಗಿದ್ದು, ತ್ರಿಂಶಾಂಶ ಲಗ್ನವು ಜಲರಾಶಿಯಾದರೆ, ರಾಶಿ ಕುಂಡಲಿಯಲ್ಲಿ ನಾವು ಹೇಳಿದ ಲಗ್ನದ ಬಲ ಏನಾಯಿತು? ಇಂತಹ ತ್ರಿಂಶಾಂಶ ರಾಶಿ ಉದಯವಾದಾಗ ಅನೇಕ ರೀತಿಯ ತೊಂದರೆಗಳ ಫಲ ನಿರೂಪಣೆ ಮಾಡಲೇ ಬೇಕು. ಹಾಗೆಯೇ ಯಾವ ಯಾವ ಗ್ರಹ ತ್ರಿಂಶಾಂಶ ವರ್ಗದಲ್ಲಿ ಪೂರಕವೇ, ಮಾರಕವೇ? ಅದರಲ್ಲೂ ದಶಾ ಭುಕ್ತಿ ನಡೆಯುತ್ತಿರುವ ಗ್ರಹಗಳ ತ್ರಿಂಶಾಂಶ ಸ್ಥಿತಿಯನ್ನು ನೋಡದೆ ಫಲ ನಿರೂಪಣೆ ಸಾಧ್ಯವೇ ಎಂಬ ಪ್ರಶ್ನೆ ನನ್ನನ್ನು ಸದಾ ಕಾಡುತ್ತದೆ
ಬೃಹತ್ ಪರಾಶರ ಹೋರಾ ಶಾಸ್ತ್ರ ದ ಆರನೆಯ ಅಧ್ಯಾಯದ ೨೭ ಮತ್ತು ೨೮ ನೆಯ ಶ್ಲೋಕಗಳು ಬಹಳ ಸ್ಪಷ್ಟವಾಗಿ ತ್ರಿಶಾಂಶ ವರ್ಗವನ್ನು ರಚಿಸುವ ಕ್ರಮವನ್ನು ವಿವರಿಸಿದೆ.
ನಾನು ಒಂದು ಜನ್ಮ ಕುಂಡಲಿ ಮತ್ತು ತ್ರಿಂಶಾಂಶ ವರ್ಗದ ಉದಾಹರಣೆಯನ್ನು ಕೊಡುತ್ತಿದ್ದೇನೆ.
ಜನ್ಮ ಲಗ್ನ ವೃಶ್ಚಿಕ, ಲಗ್ನಾದಿಪತಿ ಕುಜ ಮಕರದಲ್ಲಿ ಉಚ್ಚ – ಇದೇ ಸ್ಥಿತಿ ತ್ರಿಂಶಾಂಶದಲ್ಲೂ ಇದೆ. ರಾಶಿ ಕುಂಡಲಿಯ ಶನಿ ಅಷ್ಟಮದಲ್ಲಿ, ತ್ರಿಂಶಾಂಶದಲ್ಲೂ ಅದೇ ಮುಂದುವರೆದಿದೆ. ಬುಧ ರಾಶಿಯಲ್ಲೂ ತ್ರಿಂಶಾಂಶದಲ್ಲೂ ವಾಯುತತ್ವ ರಾಶಿಯಲ್ಲಿ. ಶುಕ್ರ ರಾಶಿ ಮತ್ತು ತ್ರಿಂಶಾಂಶದಲ್ಲಿ ಅಗ್ನಿತತ್ವ. ಚಂದ್ರನೂ ರಾಶಿ ಮತ್ತು ತ್ರಿಂಶಾಂಶದಲ್ಲಿ ಪೃಥ್ವೀ ತತ್ವ. ರವಿಯು ರಾಶಿಯಲ್ಲಿ ಜಲತತ್ವ ತ್ರಿಂಶಾಂಶದಲ್ಲಿ ಪೃಥ್ವೀ ತತ್ವ. ಗುರು ರಾಶಿಯಲ್ಲಿ ಜಲತತ್ವ ತ್ರಿಂಶಾಂಶದಲ್ಲಿ ಪೃಥ್ವೀ ತತ್ವ. ರಾಹು ರಾಶಿಯಲ್ಲಿ ಜಲತತ್ವ ತ್ರಿಂಶಾಂಶ ದಲ್ಲಿ ಪೃಥ್ವೀ ತತ್ವ. ಕೇತು ರಾಶಿ ಮತ್ತು ತ್ರಿಂಶಾಂಶ ದಲ್ಲಿ ಪೃಥ್ವೀ ತತ್ವ.
ರಾಶಿಗಳ ತತ್ವವನ್ನು ಆಧರಿಸಿ ಇದು ಒಂದು ಅತ್ಯುತ್ತಮವಾದ ತ್ರಿಂಶಾಂಶ ಕುಂಡಲಿ.
1. ಜನ್ಮಲಗ್ನ ಮತ್ತು ಲಗ್ನಾಧಿಪತಿ ತ್ರಿಂಶಾಂಶದಲ್ಲೂ ಅದೇ ಆಗಿರುವುದು
2. 9 ಗ್ರಹಗಳ ಪೈಕಿ 6 ಗ್ರಹಗಳು ರಾಶಿಯಲ್ಲೂ ತ್ರ್ರಿಂಶಾಂಶದಲ್ಲೂ ಒಂದೇ ತತ್ವದಲ್ಲಿರುವುದು.
3. ಉಳಿದ ಮೂರು ಗ್ರಹಗಳೂ ಸಹಾ ರಾಶಿಯಲ್ಲೂ ತ್ರ್ರಿಂಶಾಂಶದಲ್ಲೂ ವ್ಯತಿರಿಕ್ತವಾದ ತತ್ವಗಳಲ್ಲಿ ಇಲ್ಲದೇ ಇರುವುದು.
ತ್ರಿಂಶಾಂಶ ಕುಂಡಲಿಯು ಅರಿಷ್ಟಗಳನ್ನು ಸೂಚಿಸುವ ಕುಂಡಲಿ ಎಂದು ಬೃಹತ್ ಪರಾಶರ ಹೋರಾಶಾಸ್ತ್ರವು ಸ್ಪಷ್ಟವಾಗಿ ಹೇಳಿದೆ. ಪ್ರಾರಬ್ಧ ಕರ್ಮಗಳಿಂದಲೇ ಅರಿಷ್ಟಗಳು ಸಂಭವಿಸುವುದರಿಂದ ತ್ರಿಂಶಾಂಶ ಕುಂಡಲಿಯು ಪ್ರಾರಬ್ಧ ಕರ್ಮವನ್ನು ಸೂಚಿಸುತ್ತದೆ ಎಂದು ಅರ್ಥೈಸಿದರೆ ತಪ್ಪಲ್ಲ.
ಮೇಲೆ ಉದಹರಿಸಿದ ತ್ರಿಂಶಾಂಶ ಕುಂಡಲಿ ಅತ್ಯಂತ ಉತ್ತಮ ವಾಗಿದ್ದರೂ ಜಾತಕನು ತನ್ನ ಗುರು ದೆಶೆ ಬುಧ ಭುಕ್ತಿಯಲ್ಲಿ ಮಾನಸಿಕ ಅಶಾಂತಿ, ಹೆಚ್ಚಿನ ಹಣಕಾಸಿನ ನಷ್ಟ, ಕೋರ್ಟು ಕಚೇರಿಗಳಿಗೆ ಅಲೆತ ಮುಂತಾದ ದುಷ್ಪರಿಣಾಮಗಳನ್ನು ಎದುರಿಸುತ್ತಿರುವುದರ ಬಗ್ಗೆ ವಿಶ್ಲೇಷಿಸ ಬೇಕಿದೆ. ಅಷ್ಟೇ ಅಲ್ಲದೆ ಬುಧ ಮತ್ತು ಶನಿ ೮ ಮತ್ತು ೧೨ ನೆಯ ಭಾವಾಧಿಪತಿಗಳಾಗಿ ಪರಿವರ್ತನಾ ಯೋಗ ವಿರುವುದು ವಿಪರೀತ ರಾಜಯೋಗವನ್ನು ಸೂಚಿಸುತ್ತದೆ ಮತ್ತು ಬುಧ ಭುಕ್ತಿಯು ವಿಪರೀತ ರಾಜಯೋಗವನ್ನು ಸೂಚಿಸುವ ಗ್ರಹವಾಗಿದ್ದು ಈ ಭುಕ್ತಿಯಲ್ಲಿ ದುಷ್ಪರಿಣಾಮಗಳು ಏಕೆ ಎಂಬ ಬಗ್ಗೆಯೂ ವಿಶ್ಲೇಷಣೆ ಬೇಕಿದೆ.
1. ಭುಕ್ತಿನಾಥ ಬುಧ ಷಷ್ಟ್ಯಾಂಶದಲ್ಲಿ ಉತ್ಪಾತ ಅಂಶವೆಂಬ ಅಶುಭ ಷಷ್ಟ್ಯಾಂಶ ಹೊಂದಿರುವುದು.
2. ಭುಕ್ತಿನಾಥ ಬುಧ ದಶಾನಾಥನಿಂದ ದ್ವಾದಶದಲ್ಲಿದ್ದು ಯಾವುದೇ ಶುಭ ವೀಕ್ಷಣೆ ಇಲ್ಲದಿರುವುದು. ಇಂತಹ ಗ್ರಹಸ್ಥಿತಿಯಲ್ಲಿ ಅಶುಭ ಫಲಗಳನ್ನು ಮಹರ್ಷಿ ಪರಾಶರರು ಸ್ಪಷ್ಟವಾಗಿ ಹೇಳಿದ್ದಾರೆ. ವಿಪರೀತ ರಾಜಯೋಗಕಾರಕ ಗ್ರಹದ ಭುಕ್ತಿಯು ದಶಾನಾಥನಿಂದ ಇರುವ ಸ್ಥಾನ ಮತ್ತು ಷಷ್ಟ್ಯಾಂಶದ ಅಂಶ ದಿಂದ ಅಶುಭ ಫಲ ನೀಡುತ್ತದೆ ಎನ್ನಲು ಇದು ಉತ್ತಮ ಉದಾಹರಣೆ.
3. ಜನ್ಮರಾಶಿ ಕುಂಡಲಿಯಲ್ಲಿ ಬುಧನು ಕುಂಭ ರಾಶಿ ಸ್ಥಿತನಿದ್ದು, ಬುಧ ಅಷ್ಟಕವರ್ಗದಲ್ಲಿ ಮೀನರಾಶಿಗೆ ಕೇವಲ 1 ಬಿಂದು ಇರುವುದನ್ನು ಗಮನಿಸ ಬೇಕು. ದಶಾನಾಥನಾದ ಗುರು ಜನ್ಮಕುಂಡಲಿಯಲ್ಲಿ ಮೀನ ರಾಶಿ.
ದಶಾಭುಕ್ತಿಯ ಫಲ ನಿರ್ಣಯ ಮಾಡುವಾಗ ಭುಕ್ತಿನಾಥನು ಎಷ್ಟೇ ಬಲಶಾಲಿ ಯಾಗಿದ್ದರೂ ಜನ್ಮ ಕುಂಡಲಿಯಲ್ಲಿ ದಶಾನಾಥನಿಂದ 6, 8, 12 ರಲ್ಲಿದ್ದು ಯಾವುದೇ ಶುಭವೀಕ್ಷಣೆ ಇಲ್ಲದಿದ್ದರೆ; ಭುಕ್ತಿನಾಥನು ಅಶುಭ ಷಷ್ಟ್ಯಾಂಶದಲ್ಲಿದ್ದರೆ, ಭುಕ್ತಿನಾಥನ ಅಷ್ಟಕವರ್ಗದಲ್ಲಿ ದಶಾನಾಥನು ಜನ್ಮಕುಂಡಲಿಯಲ್ಲಿರುವ ರಾಶಿಗೆ ಕಡಿಮೆ ಅಷ್ಟಕವರ್ಗ ಬಿಂದುಗಳು ಇದ್ದರೆ, ಉತ್ತಮ ಫಲಗಳನ್ನು ಹೇಳುವುದು ಸಾಧ್ಯವಾಗಲಾರದು
ಮೇಲೆ ಹೇಳಿದಂತೆ ಈ ಜಾತಕನಿಗೆ ಗುರು ದೆಶೆ ನಡೆಯುತ್ತಿದ್ದು, ಗುರು ನವಂಬರ 2019 ರಲ್ಲಿ ಧನುಸ್ ರಾಶಿಯನ್ನು ಪ್ರವೇಶಿಸಿದ ಫಲ, ಹಾಗೂ ಮಕರ ರಾಶಿಗೆ ಮೂರು ಬಾರಿ ಪ್ರವೇಶಿಸಿ ಮತ್ತೆ ಹಿಂದಿನ ರಾಶಿಗೆ ಹೋಗುವ ಮತ್ತು ಮಕರದಲ್ಲಿ ಶನಿಯ ಸಂಚಾರದ ಫಲಗಳನ್ನು ಇನ್ನೊಂದು ಲೇಖನದಲ್ಲಿ ವಿಶ್ಲೇಷಣ ಮಾದರೆ, ಜ್ಯೋತಿಷ್ಯ ಶಾಸ್ತ್ರ ಆಸಕ್ತರಿಗೆ ಇಷ್ಟವಾಗಬಹುದು..
ಷಷ್ಟ್ಯಾಂಶ ವರ್ಗ ಕುಂಡಲಿಯ ರಚನೆಯು ಬೃಹತ್ ಪರಾಶರ ಹೋರಾಶಾಸ್ತ್ರ ದ ಆರನೇ ಅಧ್ಯಾಯದ 33 ನೇ ಶ್ಲೋಕದಲ್ಲಿ ಸ್ಪಷ್ಟವಾಗಿ ಹೇಳಿದೆ.
ಷಷ್ಟ್ಯಾಂಶ ವರ್ಗ ಕುಂಡಲಿಯ ರಚನೆಗೆ ಬೇಕಾದ್ದು ಆಯಾಯ ಗ್ರಹದ ಸ್ಫುಟ ಮಾತ್ರವೇ ಹೊರತು ಗ್ರಹಸ್ಥಿತ ರಾಶಿಯ ಗಣನೆ ಬೇಕಿಲ್ಲಾ. ಗ್ರಹ ಸ್ಫುಟವನ್ನು 2 ರಿಂದ ಗುಣಿಸಿ, 12 ರಿಂದ ಭಾಗಿಸಿ ಉಳಿದ ಶೇಷಕ್ಕೆ 1 ನ್ನು ಸೇರಿಸಿದರೆ ಬರುವ ಸಂಖ್ಯೆ ಆ ಗ್ರಹದ ಷಷ್ಟ್ಯಾಂಶ ವರ್ಗದ ರಾಶಿ ಸಂಖ್ಯೆ.
ಉದಾ: ಮೀನ ರಾಶಿ ಸ್ಥಿತ ಗ್ರಹ ಸ್ಫುಟ 11-57 ಇದನ್ನು ಎರಡರಿಂದ ಗುಣಿಸಿದರೆ 23-54 ಇದನ್ನು 12 ರಿಂದ ಭಾಗಿಸಿದರೆ ಶೇಷ ೧೧-೫೪. ಇದಕ್ಕೆ ೧ ನ್ನು ಕೂಡಿದರೆ ೧೨-೫೪ ಅಂದರೆ ೧೨ ಭಾಗ ೫೪ ಕಲೆ. ಕಲೆಯನ್ನು ಬಿಟ್ಟು ೧೨ ಅಂದರೆ ರಾಶಿಯಲ್ಲಿ ಆ ಗ್ರಹ ಇದ್ದ ರಾಶಿಯಿಂದ ೧೨ ನೇ ರಾಶಿ ಅಂದರೆ ಕುಂಭ. ಮೀನ ರಾಶಿಯಲ್ಲಿ ೧೧-೫೭ ರಲ್ಲಿ ಇರುವ ಗ್ರಹದ ಷಷ್ಟ್ಯಾಂಶ ರಾಶಿ ಕುಂಭ.
ಷಷ್ಟ್ಯಾಂಶ ರಾಶಿಯನ್ನು ಪರಿಗಳಿಸುವಾಗ ಗ್ರಹದ ಭಾಗವನ್ನು ಮಾತ್ರ ಪರಿಗಣಿಸಿ ಕಲೆಯನ್ನು ಪರಿಗಣಿಸುತ್ತಿಲ್ಲಾ.
ಇದನ್ನು ಇನ್ನಷ್ಟು ಆಳವಾಗಿ ಪರಿಗಣಿಸಲು ಪರಾಶರರು ತಮ್ಮ ಬೃಹತ್ ಪರಾಶರ ಹೋರಾಶಾಸ್ತ್ರದ ಆರನೇ ಅಧ್ಯಾಯದ ೩೪ ರಿಂದ ೪೧ ಶ್ಲೋಕಗಳವರೆಗೆ, ರಾಶಿಯನ್ನು ೬೦ ಭಾಗಗಳಾಗಿ ವಿಂಗಡಿಸಿ ಒಂದೊಂದು ಭಾಗಕ್ಕೂ ಅಧಿದೇವತೆಗಳನ್ನು ಗುರುತಿಸುವ ಮೂಲಕ ಆಯಾಯ ಭಾಗವು ಶುಭ ಅಥವಾ ಅಶುಭ ಎಂದು ನಿರ್ಣಯಿಸಿದ್ದಾರೆ.
ಇದಲ್ಲದೆ ತಮಿಳು ಭಾಷೆಯ ಪ್ರಾಚೀನ ಜ್ಯೋತಿಷ್ಯ ಶಾಸ್ತ್ರಗಳನ್ನು ಆಧರಿಸಿ ರಚಿತವಾದ ಪಂಡಿತ ಕಡಲಾಂಗುಡಿ ನಟೇಶ ಶಾಸ್ತ್ರಿಯವರ ಜಾತಕ ತತ್ವ (Oct 1878-1961 Feb) ಮತ್ತು ಶ್ರೀ ಬಿ ಸೂರ್ಯನಾರಾಯಣ ಅವರ ಸರ್ವಾರ್ಥ ಚಿಂತಾಮಣಿಯ ಇಂಗ್ಲಿಷ್ ಅನುವಾದ ಹಾಗೂ ೧೬ ನೇ ಶತಮಾನದ ಜ್ಯೋತಿಷ್ಯ ಮಹಾಪಂಡಿತ ಮಂತ್ರೇಶ್ವರ / ಮಾಂತ್ರೇಶ್ವರರ ಫಲದೀಪಿಕಾ ಗ್ರಂಥಗಳಲ್ಲೂ ರಾಶಿಯ 60 ಭಾಗಗಳು ಅವುಗಳ ಹೆಸರು ಮತ್ತು ಶುಬಾಶುಭ ಭಾಗಗಳ ಬಗ್ಗೆ ವಿವರ ಗಳಿದ್ದು, ಕೆಲವು ಭಾಗಗಳ ಬಗ್ಗೆ ಭಿನ್ನವಾದ ಅಭಿಪ್ರಾಯಗಳು ವ್ಯಕ್ತವಾಗಿದ್ದು ನಾನು ಪರಾಶರರ ಅಭಿಪ್ರಾಯವನ್ನು ಫಲ ನಿರೂಪಣೆಯಲ್ಲಿ ಉಪಯೋಗಿಸುತ್ತಿದ್ದೇನೆ.
ಜನನ ಸಮಯವು 2 ರಿಂದ 3 ನಿಮಿಷ ವ್ಯತ್ಯಾಸವಾದರೂ ಲಗ್ನದ ಷಷ್ಟ್ಯಾಂಶ ದ ಅಂಶ ಬದಲಾಗುತ್ತದೆ. ಇದು ಅವಳಿಗಳ ಜಾತಕ ಪರಿಶೀಲನೆಗೆ ಅತ್ಯುತ್ತಮ ಸಾಧನ. ಹಾಗೆಯೇ ಫಲನಿರೂಪಣೆಯಲ್ಲಿ ವ್ಯತ್ಯಾಸವಾಗಲೂ ಕಾರಣ ಆಗುತ್ತದೆ. ಅದೇ ರೀತಿ ಜಾತಕನ / ಳ ಹಿಂದಿನ ಆಗುಹೋಗುಗಳನ್ನು ಪರಿಶೀಲಿಸಿ ಜನನ ಕಾಲವನ್ನು ಸರಿಯಾಗಿ ನಿರ್ಧರಿಸಲೂ ಅನುಕೂಲವಾಗುತ್ತದೆ
ಮೇಲೆ ಉದಾಹರಿಸಿದ ಜನ್ಮ ಕುಂಡಲಿಗೆ ಸಂಬಂಧಿಸಿದಂತೆ ಭುಕ್ತಿನಾಥನಾದ ಬುಧನು ಅಶುಭ ಷಷ್ಟ್ಯಾಂಷದಲ್ಲಿದ್ದು, ಷಷ್ಟ್ಯಾಂಶ ವರ್ಗ ಕುಂಡಲಿಯಲ್ಲಿ ಬುಧನು ಉಚ್ಛ ಸ್ಥಾನದಲ್ಲಿರುವುದು ಗಮನಿಸ ಬೇಕಾದ ಅಂಶ. ಹಾಗಿದ್ದಾಗ್ಯೂ ಅಶುಭ ಫಲಗಳೇ ಒದಗಿರುವುದಕ್ಕೆ ಕಾರಣಗಳನ್ನು ಈ ಹಿಂದೆ ತಿಳಿಸಲಾಗಿದೆ.
ಷಷ್ಟ್ಯಾಂಶದ 60 ಅಂಶಗಳು, ಅವುಗಳ ಹೆಸರು ಮತ್ತು ಶುಭಾಶುಭ ಅಂಶಗಳನ್ನು ತೋರುವ ಪಟ್ಟಿಯನ್ನು ಇಲ್ಲಿ ಒದಗಿಸಿದ್ದೇನೆ.
ಲೋಕಾಸಮಸ್ತಾ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು
2 Responses
Wonderful and thank you so much for details and references of Trishamsha and Shastamsha
As Trishamsha in Ones Jataka indicates Prarabdha karmas
Does Shatamsha is a subset of Prarabdha karmas to be experienced at various stages of ones life
Please help
Thanks in advance
1. Trimsamsa is said to indicate ARISHTA, that is misfortune. It is my understanding that the Chart is drawn with birth details, the misfortunes associated with the Janma Kundali should be pertaininmg one’s PRARABDHA KARMA. Irrespective of any one agree with me or otherwise, no one can dispute that TRIMSAMSA indicate Misfortune,
2. Trimsamsa and Shatyamsha both are totally different charts indiacting different things. One shall not find relationship with these two charts just because I dealt them in a single article. The purpose of mentioning both these charts in one article these two charts are not at all consulted by most of the Today’s astrologers while giving predictions.
Hope I have answered the query to your satisfaction