ಸೂರ್ಯಗ್ರಹಣದ ಬಗ್ಗೆ ಇರುವ ಪ್ರಥಮ ಉಲ್ಲೇಖ, ಪ್ರಾಯಶಃ ಋಗ್ವೇದದ ಐದನೆಯ ಮಂಡಲದ 40 ನೇ ಸೂಕ್ತ ಎನ್ನಬಹುದು.  ಆಸಕ್ತರು ಋಗ್ವೇದದ ಈ ಭಾಗವನ್ನು ಓದಬಹುದಾಗಿದೆ.

ಮೊಟ್ಟ ಮೊದಲನೆಯದಾಗಿ ಗ್ರಹಣದ ಬಗ್ಗೆ ಇರುವ ವಿಚಿತ್ರ ಭಯದಿಂದ ಹೊರಗೆ ಬಂದರೆ ಮಾತ್ರ ಅದರಿಂದ ಆಗುವ ಅನುಕೂಲಗಳ ಪರಿಚಯ ಮಾಡಿಕೊಳ್ಳಲು ಸಾಧ್ಯ. ಗ್ರಹಣಗಳು ಮಾನವರನ್ನು ಒಂದು ಹಂತದಿಂದ ಮೇಲಿನ ಹಂತಕ್ಕೆ ಒಯ್ಯುವ ಪ್ರಕೃತಿಯ ಕೊಡುಗೆ ಎಂದರೆ ತಪ್ಪಲ್ಲಾ. ಗ್ರಹಣಗಳು ಬದಲಾವಣೆ ತರುತ್ತವೆ. ಆ ಬದಲಾವಣೆಯ ಉಪಯೋಗ ಪಡೆಯುವುದು ನಮ್ಮ ಕೈಯಲ್ಲಿ ಇದೆ.

ಗ್ರಹಣ ಕುಟುಂಬದಲ್ಲಿ ಮಗುವಿನ ಜನನದ ಸುದ್ದಿ ಕೊಡಬಹುದು. ಮದುವೆ ಅಥವಾ ನಿಶ್ಚಿತಾರ್ಥದ ಸುದ್ದಿ ನೀಡಬಹುದು. ವೃತ್ತಿಯಲ್ಲಿ ಬದಲಾವಣೆ, ಮುಖ್ಯವಾದ ಪ್ರವಾಸ ಕೈಗೊಳ್ಳಬಹುದು. ಹೊಸ ಹೊಸ ಆಲೋಚನೆಗಳು, ಹೆಚ್ಚಿನ ವಿದ್ಯಾಭ್ಯಾಸಕ್ಕೆ ಪ್ರಯತ್ನ, ಇಂತಹ ಹಲವಾರು, ಬಹಳ ಕಾಲದವರೆಗೆ ನೆನಪಿನಲ್ಲಿ ಉಳಿಯುವ ಘಟನೆಗಳು  ಸಂಭವಿಸುತ್ತವೆ.

ಏನೇ ಆಗಲಿ ಬಿಡಲಿ, ಬ್ರಹ್ಮಾಂಡದ ಪ್ರಜ್ಞೆಯ, ಶಕ್ತಿಯ ಉದ್ದೇಶ ಮಾತ್ರ ಎಲ್ಲವನ್ನೂ ಮುಂದಕ್ಕೆ ತೆಗೆದುಕೊಂಡು ಹೋಗುವುದೇ  ಹೊರತು ಬೇರೇನೂ ಅಲ್ಲಾ.  ಸಾಮಾನ್ಯವಾಗಿ ಗ್ರಹಣಗಳು ಜೀವನದಲ್ಲಿನ ಪ್ರಮುಖ ತಿರುವುಗಳಿಗೆ ಕಾರಣವಾಗುವುದಂತೂ ಸತ್ಯ.  ನಮಗೇ ಏನೂ ಬದಲಾವಣೆ ಆಗಲಿಲ್ಲವೆಂದರೂ ನಮ್ಮ ಕುಟುಂಬದಲ್ಲಿ, ನಮ್ಮ ಹತ್ತಿರದ ಬಂಧುಗಳಲ್ಲಿ ಆದರೂ ಈ ಬದಲಾವಣೆ ಕಂಡು ಬಂದೇ ಬರುತ್ತದೆ.

ಒಂದು ಮುಖ್ಯ ವಿಷಯ ಎಂದರೆ, ಗ್ರಹಣಗಳ ಮೂಲಕ ಬ್ರಹ್ಮಾಂಡದ ಶಕ್ತಿಯು ನಮ್ಮನ್ನು ಮುಂದಕ್ಕೆ ತಳ್ಳುತ್ತದೆ, ಹಿಂದಿನ ಸ್ಥಿತಿಯಿಂದ ನಮ್ಮನ್ನು ಬಹುದೂರ ತಳ್ಳುತ್ತದೆ. ನಮಗೆ ಆ ಸ್ಥಿತಿ ಒಪ್ಪಿಗೆ ಆಗದಿದ್ದರೆ, ಹಿಂದಕ್ಕೆ ಹೋಗುವ ಅವಕಾಶವಂತೂ ಇಲ್ಲವೇ ಇಲ್ಲಾ. ಆದರೆ ಅಲ್ಲಿಂದ ಮುಂದೆ ಹೋಗುವ ಪ್ರಯತ್ನ ಪಡಬಹುದು.

ಈ ಬದಲಾವಣೆಗಳು ತಕ್ಷಣವೇ ಆಗಿಬಿಡಬಹದು ಅಥವಾ ಹಲವು ತಿಂಗಳುಗಳಲ್ಲಿ ಆಗಬಹುದು.

ಅದರಲ್ಲೂ ಸೂರ್ಯ ಗ್ರಹಣವಂತೂ ಹೊಸ ಹೊಸ ಆಯಾಮಗಳನ್ನು ಹೊಸ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. ಸೂರ್ಯಗ್ರಹಣ ಉತ್ತೇಜಕ, ಪ್ರಚೋದಕವಾಗಿದೆ ಮತ್ತು ಸಕಾರಾತ್ಮಕವಾದದ್ದ್ದೂ ಅಹುದು.  ಒಂದರ ನಂತರ ಒಂದು ಬರುವ ಗ್ರಹಣಗಳಿಗೆ ಒಂದು ಉದ್ದೇಶವಿರುತ್ತದೆ.  ಆ ಉದ್ದೇಶವನ್ನೇ ಒಂದರ ಹಿಂದೆ ಬರುವ ಗ್ರಹಣಗಳು ಮುಂದುವರೆಸುತ್ತವೆ.

ಎಲ್ಲೋ ಆದ ಘಟನೆ ನಮ್ಮ ಮೇಲೆ ಹಟಾತ್ ಪರಿಣಾಮ ಬೀರುವ ಸಾಧ್ಯತೆ ಗ್ರಹಣಗಳಿಂದ ಆಗುತ್ತದೆ. ಮುಂದೆ ಎಂದೋ ಆಗಬಹುದು ಎಂದುಕೊಂಡಿದ್ದು ಈ ಕ್ಷಣವೇ ಆಗುವಂತೆ ಮಾಡುತ್ತವೆ ಗ್ರಹಣಗಳು.

ಚಕಿತವೆನಿಸುವಂತೆ, ಹೊಳೆಯುವ ಸತ್ಯದ ಕಿರಣಗಳನ್ನು ನಮ್ಮ ಜೀವನದ ಮೇಲೆ ಚೆಲ್ಲುತ್ತವೆ;.ಸತ್ಯದ ಅರಿವು ಮೂಡಿಸುತ್ತವೆ ಗ್ರಹಣಗಳು. ಹಾಗೂ ನಾವು ಕಣ್ಣು ಮುಚ್ಚಿಕೊಂಡರೆ ಅದು ನಮ್ಮ ಕರ್ಮ ಅಷ್ಟೆ.

ಗ್ರಹಣಗಳು ನಮ್ಮನ್ನು ಹಿಂತಿರುಗಿ ಹೋಗಲು ಬಿಡುವುದೇ ಇಲ್ಲಾ. ಅವು ನಮ್ಮನ್ನು ಮುಂದಿನ ಹಂತಕ್ಕೆ ದೂಡುತ್ತವೆ. ನಮಗೆ ಹೊಸ ಹೊಸ ಅನುಭವಗಳನ್ನು ಮಾಡಿಸುತ್ತವೆ. ಈ ಅನುಭವಗಳಿಗೆ ನಾವು ನಮ್ಮ ಕಣ್ಣು ಮತ್ತು ಮನಸ್ಸನ್ನು ತೆರೆದಿಡಬೇಕಷ್ಟೆ. ಗ್ರಹಣ ಕಾಲದಲ್ಲಿ ಯಾವುದೇ ಸುದ್ದಿ, ಸೂಚನೆಗಳು, ಕೊನೆಗೆ ಅವು ಗಾಸಿಪ್ ಗಳು ಆಗಿದ್ದರೂ ಗಂಭೀರವಾಗಿ ತೆಗೆದುಕೊಳ್ಳಬೇಕು.  ಅವು ಯಾವುದೋ ಮುಖ್ಯವಾದ ವಿಷಯವನ್ನು ಸೂಕ್ಷವಾಗಿ ನಮಗೆ ತಲುಪಿಸುತ್ತಿರುತ್ತವೆ.

ಗ್ರಹಣವು ಹುಟ್ಟುದಿನಕ್ಕೆ ಐದಾರು ದಿನ ಮೊದಲು ಅಥವಾ ನಂತರ ಬಂದರೆ ಆರೋಗ್ಯದ ಬಗ್ಗೆ ಎಚ್ಚರಿಕೆ ಇರಬೇಕು.  ಸೂರ್ಯ ಗ್ರಹಣವು ಕುಟುಂಬದ ಹಿರಿಯ ಪುರುಷನನ್ನು ಕಳೆದುಕೊಳ್ಳುವ ಸಾಧ್ಯತೆಗಳನ್ನು ತೋರುತ್ತದೆ. ಗ್ರಹಣದಿನದಂದು ಮತ್ತು ಮೂರು ದಿನ ಮೊದಲು ನಂತರ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು.

ಅಗ್ನಿ ರಾಶಿಯಲ್ಲಿ ಗ್ರಹಣವಾದರೆ, ಅಗ್ನಿರಾಶಿಗಳಾದ ಮೇಷ, ಸಿಂಹ, ಧನುಸ್ ರಾಶಿಗಳವರಿಗೆ ಶುಭ.

ಹಾಗೆಯೇ ಜಲರಾಶಿಯಲ್ಲಿ ಗ್ರಹಣವಾದರೆ ಜಲರಾಶಿಗಳಾದ ಕರ್ಕಾಟಕ, ವೃಷ್ಚಿಕ ಮತ್ತು ಮೀನ ರಾಶಿಗಳವರಿಗೆ ಶುಭ.

ಪೃಥ್ವೀ ತತ್ವದ ರಾಶಿಯಲ್ಲಿ ಗ್ರಹಣವಾದರೆ ಪೃಥ್ವೀ ತತ್ವದ ರಾಶಿಗಳಾದ ವೃಷಭ ಕನ್ಯಾ ಮತ್ತು ಮಕರ ರಾಶಿಗಳವರಿಗೆ ಶುಭ.

ವಾಯು ರಾಶಿಗಳಲ್ಲಿ ಗ್ರಹಣವಾದರೆ ವಾಯು ರಾಶಿಗಳಾದ ಮಿಥುನ, ತುಲಾ, ಕುಂಭ ರಾಶಿಗಳವರಿಗೆ ಶುಭ.

ಗ್ರಹಣ ಆಗುವ ರಾಶಿಯವರಿಗೆ ಅಶುಭ ಎಂದು ಹೇಳುವಾಗ, ಈ ಮೇಲೆ ಹೇಳಿದ ನಿಯಮ ವಿರುದ್ಧವಾಗಿದೆ ಎನಿಸಬೇಕಿಲ್ಲಾ. ಗ್ರಹಣ ಆಗುವ ರಾಶಿ ಬಿಟ್ಟು ಅದೇ ತತ್ವದ ಇನ್ನೆರಡು ರಾಶಿಗಳವರಿಗೆ ಅದು ಶುಭದಾಯಕವಾಗಿದೆ. ಉದಾ: ಈಗ ಡಿಸೆಂಬರ್ 26, 2019 ರ ಧನುಸ್ ರಾಶಿಯಲ್ಲಿನ ಸೂರ್ಯ ಗ್ರಹಣ ಧನುಸ್ ರಾಶಿಯವರಿಗೆ ಅಶುಭವಾದರೂ ಇನ್ನೆರಡು ಅಗ್ನಿ ತತ್ವದ ರಾಶಿಗಳಾದ ಮೇಷ ಮತ್ತು ಸಿಂಹ ರಾಶಿಯವರಿಗೆ ಶುಭದಾಯಕವಾಗಿದೆ.

ಗ್ರಹಣಗಳು ಕೆಟ್ಟದ್ದನ್ನೇ ಮಾಡುತ್ತವೆ ಎಂಬ ಪೂರ್ವಾಗ್ರಹಬೇಡ. ಕ್ಷಣಿಕವಾಗಿ ತೊಂದರೆ ಎನಿಸಬಹುದಾದರೂ ಅಂತಿಮವಾಗಿ ಅವು ಧನಾತ್ಮಕ ಬದಲಾವಣೆಯನ್ನೇ ತರುತ್ತವೆ ಎಂಬ ಸತ್ಯ ತಿಳಿದಿರಲಿ. ಗ್ರಹಣಗಳು ನಮಗೇ ತಿಳಿಯದಂತೆ ನಮ್ಮಲ್ಲಿ ಸುಪ್ತವಾಗಿರುವ ಶಕ್ತಿಯನ್ನು ಉಪಯೋಗಿಸುವಂತಹ ಅವಕಾಶಗಳನ್ನು ನೀಡುತ್ತವೆ.

ಸೂರ್ಯಗ್ರಹಣವು ನಮಗಾಗಿ ಹೊಸ ದೃಷ್ಟಿಕೋನವನ್ನೇ ಸೃಷ್ಟಿ ಮಾಡುತ್ತದೆ ಎಂಬ ಸತ್ಯದ ಅರಿವು ನಮಗೆ ಬೇಕು. ನಾವು ಮನುಷ್ಯರಾಗಿ ನಮ್ಮ ದೃಷ್ಟಿಕೋನವು ಸಾಮಾನ್ಯವಾಗಿ ಸೀಮಿತವಾಗಿರುತ್ತದೆ. ಆ ಸೀಮಿತ ಹಂತದಲ್ಲೇ ನಾವು ವ್ಯವಹರಿಸುವುದೂ ಸಹಾ ಸತ್ಯವೇ ಆಗಿದೆ, ಹಾಗಾಗಿ ನಾವು ಹಲವಾರು ಅವಕಾಶಗಳನ್ನು ಕಳೆದುಕೊಂಡಿರಬಹುದು. ಸೂರ್ಯ ಗ್ರಹಣವು ನಮ್ಮನ್ನು ಹೊಸ ಹೊಸ ಅವಕಾಶಗಳನ್ನು ಹುಡುಕುವಂತೆ ಮಾಡುತ್ತದೆ.  ಈ ಹೊಸ ಅವಕಾಶಗಳನ್ನು ಹುಡುಕುವ ಹಾದಿಯಲ್ಲಿ ತೊಂದರೆ ಅಡ್ಡಿ ಆತಂಕಗಳು ಎದುರಾದಾಗ ಗ್ರಹಣದಿಂದ ಆಗುತ್ತಿರುವ ತೊಂದರೆ ಎಂದು ಭಾವಿಸದೆ ಹೊಸ ಅವಕಾಶಗಳು ತೆರೆದುಕೊಳ್ಳುವ ಬಗ್ಗೆ ಗಮನ ಹರಿಸಬೇಕು.

ಗ್ರಹಣಗಳು ಬಾಹ್ಯಾಕಾಶದಲ್ಲಿನ ಚೆಕ್ ಪಾಯಿಂಟ್ಸ್. ಅವು ನಮ್ಮ ಕರ್ಮದ ಹಾದಿಯನ್ನು ಬೆಳಗುವ ಪ್ರಕಾಶಮಾನವಾದ ಬೆಳಕು.  ಈ ಗ್ರಹಣಗಳು ಸಮಯವನ್ನೇ ವೇಗಗೊಳಿಸುತ್ತವೆ ಎನ್ನುವುದು ನಂಬಲಾರದ ಸತ್ಯ.

ಡಿಸೆಂಬರ್ 26 ರ ಸೂರ್ಯ ಗ್ರಹಣ ಹೊಸ ಆರಂಭವನ್ನು ಮತ್ತು ಅನಿರೀಕ್ಷಿತ ಅವಕಾಶಗಳನ್ನು ತೆರೆಯುವುದಂತೂ ಸತ್ಯ. ನಮ್ಮಲ್ಲಿ ಬಹಳಷ್ಟು ಮಂದಿಗೆ, ನಮಗೆ ಈಗ ಏನು ಸಿಗುತ್ತಿದೆ ಅದಕ್ಕಿಂತ ಇನ್ನಷ್ಟು ಸಿಗಬೇಕು ಎನ್ನುವ ಅರಿವಾಗುವುದೇ ಸೂರ್ಯಗ್ರಹಣದಿಂದ.  ಸಮೃದ್ದಿಯನ್ನು ಕೋರಿ ಬ್ರಹ್ಮಾಂಡಕ್ಕೆ ಕಳಿಸುವ  ಅಹ್ವಾನವೇ ಗ್ರಹಣಗಳು ಎಂದರೆ ತಪ್ಪಲ್ಲ.

ಕ್ರಿ.ಪೂ. 57 ರಲ್ಲಿ ವಿಕ್ರಮಾದಿತ್ಯನ ಆಸ್ಥಾನದಲ್ಲಿದ್ದರು ಎಂದು ಹೇಳಲ್ಪಡುವ ಮಹಾನ್ ಜ್ಯೋತಿರ್ವಿಜ್ಞಾನಿ ಹಾಗೂ ಜ್ಯೋತಿಷಿ ಶ್ರೀ ವರಾಹಮಿಹಿರರು ತಮ್ಮ “ಬೃಹತ್ ಸಂಹಿತೆಯಲ್ಲಿ” (ಬೃಹತ್ ಸಂಹಿತೆಯಿಂದ ಆಯ್ದ ಶ್ಲೋಕಗಳು, ಭಾವಾರ್ಥ ದೊಂದಿಗೆ) ವಿವಿಧ ವರ್ಣಗಳವರಿಗೆ, ವಿವಿಧ ಪ್ರಾಂತಗಳಿಗೆ ಗ್ರಹಣಗಳಿಂದ ಅಗುವ ಪರಿಣಾಮಗಳನ್ನು ಹೇಳಿದ್ದಾರೆಯೇ ಹೊರತು ವಿವಿಧ ನಕ್ಷತ್ರ ಮತ್ತು ರಾಶಿಗಳಲ್ಲಿ ಜನಿಸಿದ ವ್ಯಕ್ತಿಗಳ ಮೇಲೆ ಗ್ರಹಣಗಳಿಂದ ಅಗುವ ಪರಿಣಾಮಗಳನ್ನು ಹೇಳಿಲ್ಲಾ ಎಂಬುದನ್ನು ಗಮನಿಸಬೇಕು.

ಶ್ರೀ ವರಾಹಮಿಹಿರರ ನಂತರದ ಹಲವು ಜ್ಯೋತಿಷ್ಯ ಗ್ರಂಥಗಳು, ಗ್ರಹಣ ಆಗುವ ನಕ್ಷತ್ರ ದಲ್ಲಿ, ಅದರ ಹಿಂದಿನ, ಮುಂದಿನ ಹಾಗೂ ಅನುಜನ್ಮ , ತ್ರಿಜನ್ಮ ನಕ್ಷತ್ರ ಗಳಲ್ಲಿ ಹುಟ್ಟಿದವರ ಮೇಲೆ ಆಗುವ ಪರಿಣಾಮಗಳನ್ನು ಹೇಳಿವೆಯಾದರೂ, ವ್ಯಕ್ತಿಯ ಜನ್ಮಲಗ್ನ, ಜನನ ಕಾಲದಲ್ಲಿ ರವಿಯ ಸ್ಥಾನ, ಗ್ರಹಣ ಜನ್ಮಲಗ್ನದಿಂದ ಯಾವ ಯಾವ ಭಾವದಲ್ಲಿ ಸಂಭವಿಸಿದರೆ ಆಗಬಹುದಾದ ಪರಿಣಾಮಗಳ ಬಗ್ಗೆ ಹೇಳಿಲ್ಲಾ. ಹಾಗಾಗಿ ಕೇವಲ ಜನ್ಮ ನಕ್ಷತ್ರ ದಿಂದಲೇ ಗ್ರಹಣದ ಪರಿಣಾಮ ಹೇಳವುದು ಕರಾರು ವಾಕ್ಕಾದ ಪದ್ಧತಿ ಎನಿಸಿಕೊಳ್ಳಲಾರದು.

ಗ್ರಹಣಗಳು, ದೈವ, ದೇವರು,  ಅಂದರೆ ಬ್ರಹ್ಮಾಂಡದ ಪ್ರಜ್ಞೆಯ ಒಂದು ವಿದ್ಯಮಾನವೇ ಹೊರತು, ನಾವು ದೇವರು ಎಂದು ಕರೆಯುವ ಬ್ರಹ್ಮಾಂಡದ ಪ್ರಜ್ಞೆಯು ಯಾವದೋ ನಕ್ಷತ್ರ ಅಥವಾ ರಾಶಿಯಲ್ಲಿ ಹುಟ್ಟಿರುವ ಕೋಟ್ಯಾಂತರ ಜನರನ್ನು ಹಿಂಸೆ ಮಾಡಲು ಗ್ರಹಣಗಳನ್ನು ಸೃಷ್ಟಿಸಿಲ್ಲಾ ಎಂಬ ಅರಿವು ನಮಗೆ ಆದರೆ  ಗ್ರಹಣಗಳ ಬಗ್ಗೆ ಇರುವ ಭಯ ಮಾಯವಾಗುತ್ತದೆ.

ಮುಂದುವರೆಯುವುದು ……..ಭಾಗ 2

ಭಾಗ 2 – ಡಿಸೆಂಬರ್ 26, ಸೂರ್ಯಗ್ರಹಣ: ಒಂದು ವಿಶ್ಲೇಷಣೆ ಭಾಗ 2

ಭಾಗ 3 – ಡಿಸೆಂಬರ್ 26, ಸೂರ್ಯಗ್ರಹಣ: ಒಂದು ವಿಶ್ಲೇಷಣೆ ಭಾಗ 3

ಸಕಾರಾತ್ಮಕ ಉಪಯೋಗ: ಡಿಸೆಂಬರ್ 26, ಗ್ರಹಣ- ಸಕಾರಾತ್ಮಕ ಉಪಯೋಗ