ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ

ಶಾಂತಾ ವಿಮಲಾ ಪ್ರಕಾಶಾ ಆತ್ಮಾ ಗುಹಾ ಚಿದ್ ಯೋಗಾಸ್ಯ ಶ್ರೀ ಪರಾನಂದಾದಿ ಸದ್ಗುರೂನ್ ನಮಾಮ್ಯಹಂ ಪುನಃ ಪುನಃ

तवाधारे मूले सह समयया लास्यपरया

   नवात्मानं मन्ये नवरसमहाताण्डवनटम् ।

उभाभ्यामेताभ्यामुदयविधिमुद्दिश्य दयया

   सनाथाभ्यां जज्ञे जनकजननीमज्जगदिदम् ॥ ४१॥

ತವಾಧಾರೇ ಮೂಲೇ ಸಹ ಸಮಯಯಾ ಲಾಸ್ಯಪರಯಾ

   ನವಾತ್ಮಾನಂ ಮನ್ಯೇ ನವರಸಮಹಾತಾಂಡವನಟಮ್ ।

ಉಭಾಭ್ಯಾಮೇತಾಭ್ಯಾಮುದಯವಿಧಿಮುದ್ದಿಶ್ಯ ದಯಯಾ

   ಸನಾಥಾಭ್ಯಾಂ ಜಜ್ಞೇ ಜನಕಜನನೀಮಜ್ಜಗದಿದಮ್ ॥ 41॥

ತಾಯೇ ನಿನ್ನ ಮೂಲಾಧಾರದಲ್ಲಿ ನವಾತ್ಮನನ್ನು ( ಮಹಾ ಭೈರವ)  ಧ್ಯಾನ ಮಾಡುತ್ತೇನೆ ನವಾತ್ಮನು ನವರಸಗಳ ಪ್ರತೀಕವಾಗಿದ್ದು  ಮಹಾ ತಾಂಡವ ನೃತ್ಯ ಮಾಡುತ್ತಾ ,  ಲಾಸ್ಯ ನೃತ್ಯ ಮಾಡುತ್ತಿರುವ ಸಮಯದೇವಿಯೊಂದಿಗೆ ( ಮಹಾಭೈರವಿ)

ಸೇರಿಕೊಂಡಿದ್ದಾನೆ.  ಭಸ್ಮವಾಗಿ ಹೋಗಿದ್ದ ಬ್ರಹ್ಮಾಂಡ ನಿಮ್ಮಿಬ್ಬರ ಸಮಾಗಮದಿಂದ ಮತ್ತೊಮ್ಮೆ ಹೊಸಹುಟ್ಟನ್ನು ಪಡೆದುಕೊಳ್ಳುತ್ತಿದ್ದು, ಈ ಜಗತ್ತಿಗೆ ನೀವು ಮಾತಾಪಿತರೆನಸಿಕೊಂಡಿದ್ದೀರಿ

ಮೂಲಾಧಾರ ಚಕ್ರದಲ್ಲಿ ಅದಿನಾಥ ಮತ್ತು ಲಯೇಶ್ವರಿಯರಾಗಿ, ತಾಂಡವ ಮತ್ತು ಲಾಸ್ಯ ನೃತ್ಯಮಾಡುತ್ತಾ, ಈ ನಾಟ್ಯ ಆರಂಭವೇ ಪಂಚಭೂತಗಳಲ್ಲಿ ಲೀನವಾಗಿಹೋಗಿರುವ ಜಗತ್ತಿನ ಮರುಸೃಷ್ಟಿ ಯ ಆರಂಭ. ಒಮ್ಮೆ ಈ ನಾಟ್ಯ ನಿಂತರೆ ಜಗತ್ತು ಮತ್ತೆ ಪಂಚಭೂತಗಳಲ್ಲಿ ಲೀನವಾಗಬಿಡುತ್ತದೆ.

ಶಕ್ತಿಯನ್ನು ಈ ಮಂತ್ರದಲ್ಲಿ ಸಮಯಾ ಎಂದು ಸಂಭೋದಿಸುವ ಮೂಲಕ ಶ್ರೀ ವಿದ್ಯೆಯ ಸಮಯಾಚಾರ ಪದ್ಧತಿಯನ್ನು ಗುರುತಿಸಲಾಗಿದೆ. ಶಿವನನ್ನು ಸಹಾ ಸಮಯ ಎಂಬ ಹೆದರಿನಿಂದ ಗುರುತಿಸಿದ್ದರೂ ಇಲ್ಲಿ ನವಾತ್ಮ ನೆಂದು ಹೇಳುವ ಮೂಲಕ ಒಂಬತ್ತು ವ್ಯೂಹಗಳನ್ನು ಒಳಗೊಂಡಿರುವವನು ಎಂದು ಹೇಳಲಾಗಿದೆಯಲ್ಲದೆ, ಇದು ಒಂಭತ್ತು ವಿಧದ ಅಭಿವ್ಯಕ್ತಿಯನ್ನೂ ಸೂಚಿಸುತ್ತದೆ.

ಶಿವ ಮತ್ತು ಶಕ್ತಿಯರು ಒಂದೇ ಮತ್ತು ಎಂದೆಂದಿಗೂ ಬೇರ್ಪಡಿಸಲಾಗದು ಎಂಬುದೇ    ಸಮಯಾಚಾರ ಪದ್ಧತಿಯ ತತ್ವ ಮತ್ತು ಸಾರ. ಇದನ್ನು ಶ್ರೀ ಶಂಕರ ಭಗವತ್ಪಾದರು ಸೌಂದರ್ಯಲಹರಿಯಲ್ಲಿ ಸ್ಪಷ್ಟವಾಗಿ ಹೇಳಿರುವುದೇ ಅಲ್ಲದೆ 36 ರಿಂದ 42 ರ ವರೆಗಿನ ಮಂತ್ರಗಳಲ್ಲಿ ಅದನ್ನು ಮತ್ತಷ್ಟು ಸ್ಪಷ್ಟಗೊಳಿಸಿದ್ದಾರೆ.

ನವಾತ್ಮ ಎಂದು ಕರೆಯಲಾಗಿರುವ ಶಿವನ 9 ಗುಂಪುಗಳು

ಕಾಲ. ಕುಲ ( ಬಣ್ಣ) ನಾಮ. ಜ್ಞಾನ, ಚಿತ್ತ, ನಾದ ( ಪರಾ ಪಶ್ಯಂತೀ ಮದ್ಯಮಾ ವೈಖರೀ ಎಂಬ ನಾಲ್ಕು ಬಗೆಯ ಶಬ್ದಗಳು), ಬಿಂದು,ಕಲಾ ಮತ್ತು ಜೀವ.

ಕೌಲ ಮಾರ್ಗದಲ್ಲಿ ಶಿವನನ್ನು ನವಾತ್ಮ ಎಂದು ಸಂಭೋದಿಸಲಾಗುತ್ತಿದ್ದು, ಇಲ್ಲಿ ಶಂಕರರೂ ಸಹಾ ನವಾತ್ಮನೆಂದು ಸಂಭೋದಿಸುವುದರ ಮೂಲಕ, ಕೌಲ ಮಾರ್ಗವು ಹೇಳುವ ಆನಂದ ಭೈರವ ಮತ್ತು ಆನಂದ ಭೈರವಿಯರೂ ಮತ್ತು ಸಮಯಮಾರ್ಗ ಹೇಳುವ ಸಮಯ ಸಮಯಾ ಎರಡೂ ಒಂದೇ ಎಂಬುದನ್ನು ನಿರೂಪಿಸಿದ್ದಾರೆ.

ಸೃಷ್ಟಿ ಕ್ರಿಯೆಯಲ್ಲಿ ಪ್ರಕೃತಿ ಅಥವಾ ಶಕ್ತಿಯದೇ ಪ್ರಮುಖ ಪಾತ್ರ ಎಂಬುದನ್ನು ಶ್ರೀ ವಿದ್ಯೆಯ ಎಲ್ಲಾ ಪರಂಪರೆಗಳೂ ಒಪ್ಪಿಕೊಂಡಿದ್ದು, ಜೀವನ್ಮುಕ್ತಿಗೆ, ವಿದೇಹ ಮುಕ್ತಿಗೆ ಶಕ್ತಿಯ ಅನುಗ್ರಹವನ್ನು ಪಡೆದುಕೊಳ್ಳುವುದು ಅತ್ಯವಶ್ಯವಾಗಿದೆ.

ಸಾದಕರ ಮನೋವೃತ್ತಿ ಮತ್ತು ಸಾಮರ್ಥ್ಯಕ್ಕೆ ತಕ್ಕಹಾಗೆ ಸಮಯ, ಕೌಲ ಮತ್ತು ಮಿಶ್ರಾಚಾರ ಮಾರ್ಗಗಳೆಂದು ಶ್ರೀ ವಿದ್ಯಾ ಸಾಧನೆಯ ಮೂರು ಮಾರ್ಗಗಳನ್ನು ಹೇಳಲಾಗಿದೆ.

ದಹರಾಕಾಶದಲ್ಲಿ ಅಂದರೆ ಹೃದಯಾಕಾಶದಲ್ಲಿ ದೇವಿಯನ್ನು ಸೂಕ್ಶ್ಮರೂಪದಲ್ಲಿ ಆರಾಧಿಸುವುದು ಸಮಯಾಚಾರ ಪದ್ದತಿಯಾಗಿದ್ದು, ಆರಂಭದಲ್ಲಿ ಬಾಹ್ಯ ಆಚರಣೆಯ ಮೂಲಕ ಕ್ರಮೇಣವಾಗಿ ದಹರಾಕಾಶದಲ್ಲಿ ಆರಾಧಿಸುವ ಕ್ರಮವನ್ನು ಮಿಶ್ರಾಚಾರ ಎನ್ನಲಾಗಿದೆ.

ಸಮಯಾಚಾರವು ಶಿವ ಶಕ್ತಿಯರಲ್ಲಿ ಸಮತ್ವವನ್ನು ಸಾಧಿಸುವುದರಿಂದ ಸಮಯಾಚಾರಿಗಳು ಶಕ್ತಿಯನ್ನು ಪ್ರತ್ಯೇಕವಾಗಿ  ವಿವಿಧ ಚಕ್ರಗಳಲ್ಲಿ ಆರಾಧಿಸುವ ಅವಶ್ಯಕತೆ ಇರುವುದಿಲ್ಲಾ.

ಈ ಮಂತ್ರದಲ್ಲಿ ಹೇಳಿರುವ “ಉದಯವಿಧಿಮ್” ಎಂಬ ಪದ ಕಾರ್ಯ ಕಾರಣ ಗಳ ಹಂತದಲ್ಲಿ ಶಿವ ಶಕ್ತಿಯರು ಬ್ರಹ್ಮಾಂಡದ ಪುನರುತ್ಥಾನವನ್ನು ಪ್ರಚೋದಿಸುವುದನ್ನು ಸೂಚಿಸುತ್ತಿದೆ.

ಕುಂಡಲಿನೀ ಶಕ್ತಿಯು ಪ್ರಜ್ಞೆ ಮತ್ತು ಶಕ್ತಿಯನ್ನು  ವಸ್ತುವಿನಿಂದ ಹೊರತೆಗೆಯುವ ಮೂಲಕ  ಜೀವಾತ್ಮನನ್ನು ಪರಮಾತ್ಮನ ಬಳಿಗೆ ಕೊಂಡೊಯ್ಯುತ್ತದೆ ಎನ್ನುವುದು ಈ ಮಂತ್ರದ ಸಾರಾಂಶವಾಗಿದೆ.

ಲೋಕಾ ಸಮಸ್ತಾ ಸುಖಿನೋ ಭವಂತು ಸಮಸ್ತಸನ್ಮಂಗಳಾನಿ ಭವಂತು

 

 

 

 

 

L

 

 

 

 

 

 

No responses yet

Leave a Reply

Your email address will not be published. Required fields are marked *